ತಾತ

ಕಳೆದು ಹೋದ ನಿನ್ನೆಗಳ,
ನೆನಪುಗಳ ತಡಕಿದರೆ,
ಭಾರವಾದ ನಿಟ್ಟುಸಿರೊಂದು
ಆಸರೆಯಾಗುತ್ತದೆ.
ಆಲದ ಮರದ ಆಳವಾದ 
ಬೇರುಗಳು ನೆನಪಿನಂಗಳದಲ್ಲಿ 
ಜೋಕಾಲಿಯಾಡುತ್ತದೆ.

ಹೊಣೆಗಾರಿಕೆಯ ಭಾರಕ್ಕೆ ಬಾಗಿದ ಬೆನ್ನಿನ
ಹಣ್ಣಾಗಿ ಮಾಗಿದ ಬೆಳ್ಳಿ ಕೂದಲಿನ 
ಊರಗಲ ಬೊಚ್ಚು ಬಾಯಗಲಿಸಿ
ಮಗುವಿನಂತೆ ನಗುವ ಆ ಕರ್ಣನ
ಆಲದಾ ಮರದಂತೆ ಜಗದಗಲ ಚಾಚಿ
ತನ್ನ ಚಾಚುವಿಕೆಯ ಕೆಳಗೆ ನೆರಳಾಗಿ 
ಬೆಳಕನ್ನು ಚೆಲ್ಲಿ, ಎಳೆತರುಗಳಿಗೆ
ಆಸರೆಯಾದ  ಹಿರಿಮರದಂತೆ,
ಬಾಯಾರಿದವರ ದಾಹ ಇಂಗಿಸುವ,
ಸದ್ದಿಲ್ಲದೆ ಹರಿವ ಗುಪ್ತಗಾಮಿನಿ,
ಈ ಮುದ್ದು ತಾತ.

ಎಲ್ಲ ಎಳೆಯರು ಕರೆದು 
ಸುತ್ತ ಸೇರಿಸಿಕೊಂಡು, ಕಡಲೆ ಬೇಕೇ, ಕಾಳು ಬೇಕೇ ಎನ್ನುತ್ತ , ರಾಮಾಯಣ,  ಭಾರತದ 
ಕತೆಗಳನು ತಿರು ತಿರುವಿ ಹೇಳುತ್ತ,
ಕಾಲು ಎಳೆಯುತ್ತ, ಬುದ್ಧಿ ಹೇಳುತ್ತ,
ಕಥೆಯ ಹೆಣೆಯುತ್ತ, ತಪ್ಪು ತಿದ್ದುತ್ತ 
ಕತ್ತಲದಾರಿಯಲ್ಲಿ ಜ್ಞಾನ ದೀಪವ
ಹಚ್ಚಿದವರು ಈ ಮುದ್ದು ತಾತ.

ಬಾಳೆಲ್ಲವೂ ತಾನು ದೀಪದ ಬತ್ತಿಯಂತೆ
ಉರಿದು, ಸುತ್ತೆಲ್ಲ ಬೆಳಕು ಬೀರಿ,
ಒಮ್ಮೆ ದ್ರೋಣನಂತೆ ಗುರುವಾಗಿ,‌
ಇನ್ನೊಮ್ಮೆ ಏನೂ ಅರಿಯದ ಮಗುವಾಗಿ, 
ವಾಮನರೂಪದ ತ್ರಿ ವಿಕ್ರಮನಾಗಿ,
ದಶಾವತಾರ ತೋರಿದ ತಾತ,
ಅನಾಯಾಸೇನ ಮರಣಂ,
ವಿನಾ ದೈನ್ಯೇನ ಜೀವನಂ ಮಾತಿನಂತೆ,
ಮಾತಿಲ್ಲದೆ ಮೌನಕ್ಕೆ ಜಾರಿ ಹೋದರು,
ಕನಸಲ್ಲೂ ಕಾಡುವ ಮುದ್ದು ತಾತ..






ಗುರುನಮನ

 ಗುರುವೆಂಬ ಹರಿ,
ತೋರಿಸುವ ದಾರಿ,
ನಡೆಯದಿರು ಮೀರಿ,
ನೀನಾಗುವೆ ಜಾಣ ಮರಿ.

ಶಿಕ್ಷಕರೆಂದರೆ,
ಶಿಕ್ಷೆ ನೀಡುವರಲ್ಲ;
ಶಿಕ್ಷಣ ನೀಡುವವರು,
ಶಿಕ್ಷೆಯಾಗದಂತೆ ತಡೆಯುವವರು.

ಅರಿವೆಂಬ ಬೆಳಕ,
ಮನದಲ್ಲಿ ಸೇರಿಸಿ,
ಜ್ಞಾನದಾಹವನು ಮತ್ತಷ್ಟು ಕೂಡಿಸಿ,
ಸನ್ನಡತೆಯ ಭಾವವನ್ನು ಹೃದಯದಲ್ಲಿ ಇರಿಸಿ,

ನೀವೆಲ್ಲ ಒಂದೆ,
ಈ ಮಣ್ಣಿನ ಮಕ್ಕಳು,
ಎನ್ನುವ ವ‌ಸುದೈವ ಕುಟುಂಬದ
ಕಲ್ಪನೆಯ ಬೆಳೆಸಿ,

ನಮ್ಮೆಲ್ಲರೆದೆಯಲ್ಲಿ,
ಮರದಂತೆ ಬೆಳೆದು,
ಜ್ಞಾನದಾಬೆಳಕನು ನಮಗೆ, 
ನೆರಳಾಗಿ ಚೆಲ್ಲಿ,

ಹೊಸದಾರಿದೀವಿಗೆಯ 
ನಮಗಾಗಿ ಹುಡುಕಿ,
ತನ್ನ ಹಳೆ ಜೋಳಿಗೆಯ
ಅದಕಾಗಿ ತಡಕಿ,

ನಿಮ್ಮನ್ನು ಹೆತ್ತವರ
ಹೆಸರುಳಿಸಬೇಕು,
ಕಲಿಸಿದಾ ಗುರು ನಾನೆಂದು 
ತಾ ಹೇಳಬೇಕು.

ಹೆತ್ತವಗೆ ಹಗುರಾಗಿ,
ಗುರುವಿಗೆ ಗರಿಯಾಗಿ,
ದೇಶಕ್ಕೆ ಶರಣಾಗಿ 
ಬದುಕಿ ಬಾಳಿ.

ನಿಮ್ಮೆಲ್ಲಾ ಹರಕೆಗಳು
ನಿಜವಾಗೊ ವೇಳೆಯೊಳು
ಮರಿತಿಲ್ಲ ನಿಮ್ಮನ್ನು,
ಮರೆಯಾದ ಹೊನ್ನನ್ನು.

ಯುಗದಾದಿಗಳು ಕಳೆದರೂ
ಮರಳುವ ಹುಣ್ಣಿಮೆಗೆ,
ನೆನಪಿಸುವ ಶಕ್ತಿಯಿದೆ,
ಇದೋ ನಮ್ಮ ಗುರು ನಮನ.

ಬಾಳು ಹೀಗಿರಲಿ

 ಬೀಜ ಮೊಳೆತು ಬೆಳೆಯಲಿ,

ಚಿಗುರು ಚಿಗುರಿ ಬಾಳಲಿ,

ಗಿಡ ಬೆಳೆದು ಮರವಾಗಲಿ,

ಹಕ್ಕಿ ಗೂಡು ಕಟ್ಟಲಿ,

ದಣಿದ ಜೀವ ಒರಗಲಿ ,


ಮರದ ತುಂಬ ಹೂವಿರಲಿ

ಬೆಳೆಬೆಳೆದು ಕಾಯಾಗಲಿ,

ಅದು ಬಲಿತು ಹಣ್ಣಾಗಲಿ,

ಹಣ್ಣು ಹಸಿವ ತಣಿಸಲಿ,

ಬಾಳು ಸಾರ್ಥಕವಾಗಲಿ.


ಹೆಣ್ಣಿಗೊಂದು ಮಗುವಿರಲಿ,

ಅದು ಹೆಣ್ಣಾಗಿರಲಿ,

ಅಥವಾ ಗಂಡಾಗಿರಲಿ,

ಅದು ಮುತ್ತಾಗಿರಲಿ,

ಸುಗುಣ ಸುಶೀಲವಾಗಿರಲಿ,

ಹೆತ್ತವರ ಕಣ್ಣಾಗಲಿ,

ಹೊಟ್ಟೆ ತಂಪಾಗಿಸಲಿ .


ಮಗುವಿನಂತ ಮನಸಿರಲಿ,

ಹೂವಿನಂತ ಕನಸಿರಲಿ ,

ಎಲ್ಲ ಒಳಿತು ಬಯಸುತಿರಲಿ ,

ಸದಾ ಕ್ರಿಯಾಶೀಲವಾಗಿರಲಿ,

ತಾ ನಕ್ಕು, ನಗಿಸುತಿರಲಿ ,

ಕಹಿಯೆಲ್ಲ ಮರೆತಿರಲಿ,


ನಿಮ್ಮೆಲ್ಲಾ ಸೌಂದರ್ಯ,

ಸಂಗಾತಿಗೆ ಮೀಸಲಿರಲಿ.

ಒಳಗಿರುವ ಬುದ್ಧಿ, 

ಸತ್ಕರ್ಮಕ್ಕೆ ಮೀಸಲಿರಲಿ,

ಪಡೆದ ಅನುಭವ,

ಕರುಳಬಳ್ಳಿಗಳ ದಾರಿದೀಪವಾಗಿರಲಿ.


ಸೋಲದ ಛಲವಿರಲಿ,

ಸೋಲಿಸುವ ಬಲ ಬೇಡ,

ಕಣ್ಣಿeರು ಒರೆಸುವ, 

ಮನಸು ನಿಮಗಿರಲಿ.

ಪರರ ಕನಸಿನ ಸಮಾದಿಯ ಮೇಲೆ,

ಅರಮನೆ ಕಟ್ಟುವ ಕ್ರೌರ್ಯ ಬೇಡ.


ಪರರ ತಟ್ಟೆಯ ಮೃಷ್ಟಾನ್ನಕ್ಕಿಂತ,

ನಮ್ಮದೇ ಬಟ್ಟಲಿನ ಗಂಜಿ ಮೇಲು.

ದೂರದ ಬೆಟ್ಟ ನುಣ್ಣಗೆ ಇರಬಹುದು,

ಹತ್ತಿರಕ್ಕೆ ಹೋದರೆ ನಿಜವು ತಿಳಿವುದು.

ಬದುಕು ಹೇಗೆe ಇರಲಿ,

ಪ್ರೀತಿಸುವ ಮನಸು ನಮಗಿರಲಿ.

ಪ್ರೀತಿಸುವ ಕನಸು ನಿಮಗಿರಲಿ..





ಹೃದಯವಂತರು

ಮಗುವಂತೆ ನಗುವವರು,
 ಪರರ ನೋವಿಗೆ ಆಳುವವರು,
 ನೋವಿಗೆ ಹೆಗಲಾಗುವವರು, 
 ಬೇಗೆಗೆ ನೆರಳಾಗುವವರು, 
 ಬಳ್ಳಿಗೆ ಮರವಾಗುವವರು, 
 ಹೃದಯವಂತರು. 

 ಬಾಳದೆ ಹೇಳದವರು, 
 ಹೇಳದೆ ಅರಿಯುವವರು, 
 ಬೇಡದೆ ನೀಡುವವರು, 
 ಹೇಳಲು ಕಾಯದವರು,
 ತಿರುಗಿ ನೋಡಲು ಮರೆಯದವರು,   ಹೃದಯವಂತರು.

 ಹಸಿವನ್ನು ತಣಿ‌ಸುವವರು, 
ನೀರಡಿಕೆ ಅರಿವವರು, 
ದನಿಗೆ ಕಿವಿಯಾಗುವವರು, 
ಆಸೆಯಿಲ್ಲದೆ ಪ್ರೀತಿಸುವವರು,
 ಬಯಸದೇ ಪೂಜಿಸುವವರು, ‌
ಹೃದಯವಂತರು. 

ಯಾರನ್ನೂ ಕಾಯಿ‌ಸದವರು, 
ಇರುವೆಯನ್ನೂ ನೋಯಿಸದವರು, 
 ನೋವಲ್ಲೂ ನರಳದವರು,
 ಕೆಟ್ಟದ್ದು ಬಯಸದವರು, 
ಕೈಹಿಡಿದು ನಡೆಸುವವರು,
 ಹೃದಯವಂತರು.

ವಿಚ್ಚೇದನಗಳ ಕಾರಣ,ಪರಿಹಾರ

 ಹಿಂದಿನ ಕಾಲದಲ್ಲಿ ವಿಚ್ಚೇದನದ ಕಾರಣ ಮತ್ತು ಪರಿಣಾಮಗಳು

ಹಿಂದೆಲ್ಲ ಅವಿಭಕ್ತ ಕುಟುಂಬಗಳು ಇತ್ತು.ಮನೇ ತುಂಬಾ ಜನರಿದ್ದರು. ಮನೆಯ ಹಿರಿಯರು ಪ್ರತೀ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರ ಮಾತು ಮೀರುವ ದೈರ್ಯ ಯಾರಿಗೂ ಇರಲಿಲ್ಲ.ಅದು ಬರೀ ಭಯ ಮಾತ್ರ ಅಲ್ಲ, ಗೌರವವೂ ಇತ್ತು. ಅಂತಹ ಕಾಲದಲ್ಲಿ ವಿಚ್ಛೇದನಗಳು ಬಲು ಅಪರೂಪ. ಕೆಲವೊಂದು ಬಾರಿ ಪರಿಸ್ಥಿತಿಗಳು ಕೈಮೀರಿ ಪತಿಪತ್ನಿ ದೂರಾಗುತ್ತಿದ್ದರು. ತಪ್ಪು ಯಾರದ್ದೇ ಆಗಿದ್ದರೂ, ಗಂಡ ಬಿಟ್ಟವಳು ಎಂಬ ಹಣೆಪಟ್ಟಿ ಹೆಣ್ಣಿನ ಪಾಲಿಗೆ ಕಾಯಂ ಆಗಿ ಇರುತಿತ್ತು. ಆಮೇಲಿನ ಅವಳ, ಅವಳ ಮಕ್ಕಳ ಜೀವನ ನರಕಸದೃಶ್ಯವಾಗಿರುತಿತ್ತು. ಅವಳಿಗೆ ತವರು ಮನೆಯಲ್ಲಿ ಯಾವ ಆದರವೂ ಸಿಗುತ್ತಿರಲಿಲ್ಲ. ಕಾರಣ,ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬುದು ಬರೀ ಗಾದೆಮಾತಾಗಿರದೆ ನಿಜವೆಂದೇ ನಂಬಿದ ಕಾಲವದು.ಅದು ಅನಿವಾರ್ಯವೂ ಆಗಿತ್ತು. ಮನೆ ತುಂಬ ಮಕ್ಕಳು. ಅವರ ಹೊಟ್ಟೆಬಟ್ಟೆ ನೋಡಿಕೊಳ್ಳುವುದೇ ದೊಡ್ಡ ಸಾಹಸ. ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಸಾಕಪ್ಪಾ ಸಾಕು, ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಅವರು ತಿರುಗಿ ಮನೆಗೆ ಬಂದರೆ ಹೇಗಿರಬೇಡ!? ಎಲ್ಲರೂ ಪರಿಸ್ಥಿತಿಯ ಕೈಗೊಂಬೆಗಳಾಗಿರುತಿದ್ದರು. ತಮ್ಮ ಮನೆಯ ವಾಸ್ತವ ಪರಿಸ್ಥಿತಿ ಅರಿತಿದ್ದ ಹೆಣ್ಣು ಮಕ್ಕಳು, ತವರು ಮನೆಯ ದಾರಿ ಮರೆತವರಂತೆ, ಎಲ್ಲ ಕಷ್ಟ ನುಂಗಿಕೊಂಡು, ಎಲ್ಲರ ಜೊತೆ ಹೊಂದಿಕೊಂಡು ಹೇಗೋ ಬಾಳುತ್ತಿದ್ದರು. ನೂರರಲ್ಲಿ ಒಬ್ಬರು ಸುಖವಾಗಿಯೂ ಇದ್ದರು. 

ಇಂದಿನ ಕಾಲದ ವಿಚ್ಚೇದನಗಳ ಕಾರಣಗಳು

ಈಗ ಕಾಲ ಬದಲಾಗಿದೆ. ಎಲ್ಲೆಲ್ಲು ವಿಭಕ್ತ ಕುಟುಂಬಗಳು. ಓದಿ, ಕೆಲಸ ಪಡೆದು ಅಚ್ಚು ಕಟ್ಟಾಗಿ ಮನೆ ಮಾಡಿಕೊಂಡು ತಮ್ಮ ಪಾಡಿಗೆ ತಾವಿರುವ ಕುಟುಂಬಗಳು. ಒಂದೋ ಎರಡೋ ಮಕ್ಕಳು.

  •  ಅತಿ ಮುದ್ದಿನಿಂದ ಬೆಳೆಸಿ, ಓದಿಸಿ, ಬೇಕಾದ್ದು ಕೊಡಿಸಿ, ಕಷ್ಟ,ನಷ್ಟ, ಹೊಂದಾಣಿಕೆ ಅರಿಯದೆ ಬೆಳೆದ ಮಕ್ಕಳು, ಅದೇ ಜೀವನ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾರೆ.
  •  ತುಸು ಏರುಪೇರಾದರೂ ಸಹಿಸುವ ಶಕ್ತಿ ಅವರಿಗಿಲ್ಲ.  
  •  ತನ್ನದೇ ಮಾತು ನಡೆಯಬೇಕೆಂಬ ಹಟ, ಅಹಂ. 
  • ಸಾಮಾಜಿಕ ಜಾಲತಾಣಗಳ ಪ್ರಭಾವಿತರಾಗಿ, ಚಂಚಲ ಮನಸಿನಿಂದ ಆಕರ್ಷಣೆ, ಆಮಿಷಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. 
  • ಯಾವುದೇ ಮುಂದಾಲೋಚನೆ ಇಲ್ಲದೆ ಮಾಡಿದ ತಪ್ಪುಗಳಿಗೆ ಬೆಲೆ ತೆರುತ್ತಿದ್ದಾರೆ.
  •  ಕೆಲವೊಂದು ಬಾರಿ ಅತಿಯಾಸೆಗೆ ಬಲಿಯಾಗುತ್ತಾರೆ. 
  • ಪರಸ್ಪರರ ಬಗ್ಗೆ ಇರುವ ಅಪನಂಬಿಕೆಯೂ ವಿಚ್ಛೇದನದ ಪ್ರಮುಖ ಕಾರಣಗಳಲ್ಲಿ ಒಂದು. 
  • ಗಂಡ ಮತ್ತು ಮಕ್ಕಳು ಮಾತ್ರ ತನ್ನ ಸಂಸಾರ ಎನ್ನುವ ಸ್ವಾರ್ಥಿ ಹೆಣ್ಣುಮಕ್ಕಳು, 
  • ಮದುವೆ ಆದ ಮೇಲೆ ,ನೀನು ನಿನ್ನ ಮನೆಯವರನ್ನು ನಿನ್ನ ಸ್ವಂತಿಕೆಯನ್ನು ಮರೆತುಬಿಡು ಎನ್ನುವ ಗಂಡಸರು. 
ವಿವಾಹೇತರ ಸಂಬಂಧಗಳು ಕೂಡ ಪ್ರಮುಖ ಕಾರಣ. ಅದು ಸಂಸಾರಗಳನ್ನು ಒಡೆಯದೆ ಬಿಡುವುದಿಲ್ಲ.

ವಿಚ್ಚೇದನವನ್ನು ಕಡಿಮೆ ಮಾಡಲು ಉಪಾಯಗಳು

  •   ಗಂಡು ಮಕ್ಕಳು ಹೆಣ್ಣನ್ನು ತನ್ನಂತೆ ಗೌರವಿಸಲು ಕಲಿಯಬೇಕು. 
  • ಅವರ ಆಸೆ ಆಕಾಂಕ್ಷೆಗಳನ್ನು ತಿಳಿದು ಅದಕ್ಕೆ ಬೆಂಬಲಿಸಬೇಕು. 
  • ಎಲ್ಲ ಕೆಲಸಗಳನ್ನು ಅವರ ಜೊತೆ ಹೊಂದಿಕೊಂಡು ಮಾಡಬೇಕು. 
  • ಹೆಣ್ಣು ಮಕ್ಕಳು, ತಮ್ಮ ಗಂಡನನ್ನು ಮತ್ತು ಅವರ ಮನೆಯವರನ್ನು ತಮ್ಮ ಸ್ವಂತದವರಂತೆ ಪ್ರೀತಿಸಲು, ಗೌರವಿಸಲು ಕಲಿಯಬೇಕು. 
  • ತಮ್ಮ ಗಂಡನ ಇತಿಮಿತಿಗಳನ್ನು ಅರಿತು ಅದಕ್ಕೆ ತಕ್ಕಂತೆ ಹೊಂದಿಕೊಂಡು ಬದುಕಬೇಕು. 
  • ಜೀವನಸಂಗಾತಿಯ ಭಾವನೆಗಳನ್ನು, ಅಭಿರುಚಿಗಳನ್ನು ಗೌರವಿಸಬೇಕು. 
  • ಬಿನ್ನಾಭಿಪ್ರಾಯಗಳು ಸಹಜ. ತನ್ನದೇ ಹಟ ಸಾದಿಸದೆ ಅನುಸರಿಸಿಕೊಂಡು ಹೋಗಬೇಕು. 
  • ಯಾವುದೇ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ, ತಮ್ಮ ಹೆತ್ತವರ ಬಗ್ಗೆ, ಮಕ್ಕಳ ಭವಿಷ್ಯದ ಬಗ್ಗೆ ಸರಿಯಾಗಿ ಯೋಚಿಸಬೇಕು. 
  • ತಮ್ಮ ಒಂದು ನಿರ್ಧಾರದಿಂದ ಆಗುವ ಪರಿಣಾಮಗಳ ಬಗ್ಗೆ ಸರಿಯಾಗಿ ಯೋಚಿಸಬೇಕು. 
ಇರುವುದೊಂದೇ ಜೀವನ. ಅದನ್ನು ಮಾಡೋಣ ಪಾವನ.



















ಹದಿಹರೆಯ- ಮಕ್ಕಳು ಮತ್ತು ಹೆತ್ತವರು

ಹದಿಹರೆಯ ಎನ್ನುವುದು ಪ್ರತಿಯೊಬ್ಬರ ಜೀವನದ ಅತೀ ಮುಖ್ಯ ಘಟ್ಟ. ನಾವು ಮುಂದೆ ಏನಾಗುತ್ತೇವೆ ಎಂಬುದನ್ನು ನಿರ್ಧರಿಸುವ ಸಮಯ. ಸರಿಯಾದ ಮಾರ್ಗದರ್ಶನ ದೊರೆತರೆ ಉತ್ತಮ ಭವಿಷ್ಯ ರೂಪುಗೊಳ್ಳುತ್ತದೆ. ಆದ್ದರಿಂದ ಹೆತ್ತವರಿಂದ,ಗುರುಹಿರಿಯರಿಂದ, ಸ್ನೇಹಿತರಿಂದ ಸರಿಯಾದ ಸಲಹೆಗಳು ಸಿಗುವುದು ತುಂಬಾ ಅವಶ್ಯಕ. 

 ಹದಿಹರೆಯದಲ್ಲಿ ಮಕ್ಕಳ ಮನಸ್ಸು ಮೃದುವಾದ ಮಣ್ಣನಂತಿರುತ್ತದೆ. ನಾವು ಯಾವ ಆಕಾರ ನೀಡುತ್ತೇವೋ ಅದೇ ಆಕಾರ ತಳೆಯುತ್ತದೆ. ಒಂದು ಉತ್ತಮ ಮೂರ್ತಿಯಾಗಿಯೂ ಮಾಡಬಹುದು. ಉಪಯೋಗವೇ ಇಲ್ಲದಂತೆ ಹಾಳಾಗಬಹುದು. ಆದ್ದರಿಂದ ಎಚ್ಚರಿಕೆ ಅಗತ್ಯ. 

ಹದಿಹರೆಯದ ಮಕ್ಕಳ ಮನಸ್ಥಿತಿ

  •  "ಹುಚ್ಚುಕೋಳಿ ಮನಸ್ಸು, ಅದು ಹದಿನಾರರ ವಯಸ್ಸು" ಹಾಡಿನ ಸಾಲಿನಂತೆ, ಮಕ್ಕಳ ಮನಸ್ಸು ಸೂಕ್ಷ್ಮವಾಗಿ, ಚಂಚಲವಾಗಿ, ಮುಗ್ದವಾಗಿ, ಅಪಕ್ವವಾಗಿ ಇರುತ್ತದೆ. 
  • ಯಾವುದು ಸರಿ, ಯಾವುದು ತಪ್ಪು ಎಂದು ತಿಳಿಯುವ ತಾಳ್ಮೆಯಾಗಲಿ,ಪ್ರಬುದ್ಧತೆಯಾಗಲಿ ಅವರಿಗಿರುವುದಿಲ್ಲ. 
  •  ಬುದ್ಧಿಮಾತು ಕೇಳುವ ಮನಸ್ಥಿತಿಯೂ ಅವರಿಗಿರುವುದಿಲ್ಲ.
  •  ನಾವು ಏನಾದ್ರೂ ಹೇಳಲು ಹೋದರೆ, ಒಂದೋ ಸುಮ್ಮನಿರುತ್ತಾರೆ, ಅಥವಾ ಕೇಳದವರಂತೆ ನಟಿಸುತ್ತಾರೆ, ಅಥವಾ ನನಗೆ ಏನೂ ಹೇಳಲು ಬರಬೇಡಿ ಎನ್ನುತ್ತಾರೆ. 
  • ಆ ಕಡೆ ದೊಡ್ಡವರೂ ಅಲ್ಲ, ಈ ಕಡೆ ಸಣ್ಣವರೂ ಅಲ್ಲ. ಅವರಿಗೆ ಏನು ಹೇಳಬೇಕು, ಹೇಗೆ ಹೇಳಬೇಕು, ಎಷ್ಟು ಹೇಳಬೇಕು ಎಂದು ತಿಳಿಯದೆ ಅಪ್ಪ ಅಮ್ಮ ಗೊಂದಲಕ್ಕೆ ಒಳಗಾಗುತ್ತಾರೆ. 
  • ಅವರು ಗಳಿಸಿದ ಎಲ್ಲ ಅನುಭವಗಳನ್ನು ಉಪಯೋಗಿಸಿದರೂ, ಈ ಮಕ್ಕಳನ್ನು ಸಂಭಾಳಿಸುವುದು ಹೇಗೆ ಎಂದು ತಿಳಿಯುದಿಲ್ಲ.
  • ತಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು, ಅದಕ್ಕೆ ಹೊಂದಿಕೊಳ್ಳಲು ಅವರು ಹರಸಾಹಸ ಪಡುತ್ತಿರುತ್ತಾರೆ. 
  •  ಒಂದು ಕಡೆ ಬೇರೆ ಬೇರೆ ರೀತಿಯ ಆಕರ್ಷಣೆಗಳು ಅವರನ್ನು ಸೆಳೆಯುತ್ತವೆ.
  • ಓದುವ ಒತ್ತಡಗಳು ಹೆಚ್ಚಿರುತ್ತವೆ
  • ಹೆತ್ತವರ ನಿರೀಕ್ಷೆಗಳನ್ನು ಮುಟ್ಟಲು ಆಗುವುದಿಲ್ಲ
  •  ತಾವು ಚೆನ್ನಾಗಿ ಕಾಣಬೇಕೆಂಬ ಯೋಚನೆಗಳುಕಾಡುತ್ತವೆ.
  • , ಸಾಮಾಜಿಕ ಜಾಲತಾಣಗಳ ಪ್ರಭಾವ ಬಹಳ ಇರುತ್ತವೆ.
  •  ಸ್ನೇಹಿತರು ಮತ್ತು ಪರಿಸರದ ಪ್ರಭಾವಗಳು  ಅವರನ್ನು ಹೈರಾಣಾಗಿಸುತ್ತವೆ. 
  • ಇವೆಲ್ಲದರ ನಡುವೆ ಸಮತೋಲನ ಸಾದಿಸುವಷ್ಟು ಅವರಿನ್ನೂ ಪಳಗಿರುವುದಿಲ್ಲ. 
ಅದಕ್ಕೆ ಏನಾದರೂ ಹೇಳಲು ಹೋದರೆ, ಕೂಗಾಡುತ್ತಾರೆ. ಈಗಂತೂ ಅತಿಯಾದ ಮುದ್ದಿನಿಂದ ಬೆಳೆದ ಏಕೈಕ ಮಕ್ಕಳು, ಸ್ವಲ್ಪವೂ ತಾಳ್ಮೆಯಿಲ್ಲದೆ, ಸಂಯಮವೂ ಇಲ್ಲದೇ ಬೇಕಾದಂತೆ ವರ್ತಿಸುತ್ತಾರೆ. ಆದ್ದರಿಂದ ಈ ವಯಸ್ಸಿನ ಮಕ್ಕಳಿರುವ ಮನೆಗಳಲ್ಲಿ ನಿತ್ಯ ವಾಗ್ವಾದ ಅಸಮಾದಾನ ಖಾಯಂ ಎನ್ನುವಂತಾಗಿದೆ.

 ಹೆತ್ತವರು ಸುಮ್ಮನೆ ತಲೆ ಬಿಸಿ ಮಾಡಿ ಪ್ರಯೋಜನವಿಲ್ಲ. 

ಹೆತ್ತವರಿಗೆ ಕಿವಿಮಾತು

  • ಮಕ್ಕಳ ಮನಸನ್ನು ಅರಿಯುವುದು ಬಹಳ ಮುಖ್ಯ. 
  • ನಾವು ಅವರ ವಯಸ್ಸಿನಲ್ಲಿ ಹೇಗಿದ್ದೇವೋ ಹಾಗೆ ಅವರು ಇರಲು ಆಗುವುದಿಲ್ಲ. ಕಾಲ ಬದಲಾಗಿದೆ. ಮಕ್ಕಳೂ ಬದಲಾಗಿದ್ದಾರೆ.ನಾವೂ ಬದಲಾಗಬೇಕಿದೆ. 
  • ನಮ್ಮ ಕಾಲದ ಕಟ್ಟುನಿಟ್ಟಿನ ನಿಯಮಗಳು ಈಗಿನ ಕಾಲಕ್ಕೆ ಪೂರ್ತಿಯಾಗಿ ಹೊಂದಿಕೊಳ್ಳುವುದಿಲ್ಲ. ಆದ್ದರಿಂದ ಅಗತ್ಯ ಬದಲಾವಣೆ ಮಾಡಿಕೊಂಡು, ಮಕ್ಕಳಿಗೆ ಅದನ್ನು ಪಾಲಿಸುವಂತೆ ಹೇಳಬೇಕು. 
  • ಮಕ್ಕಳಿಗೆ ಅತಿಯಾಗಿ ಮುದ್ದು ಮಾಡದೆ, ಸಣ್ಣವರಿರುವಾಗಲೇ ತಿದ್ದಿ ಬುದ್ಧಿ ಹೇಳುವುದನ್ನು ಅಭ್ಯಾಸ ಮಾಡಬೇಕು. 
  • ಜೋರು ಮಾಡಿಯೇ ಹೇಳಬೇಕು ಎಂದೇನಿಲ್ಲ. ಮೃಧುವಾಗಿ, ಸಮಾಧಾನದಿಂದ ಬುದ್ಧಿ ಹೇಳಿದರೆ ಮಕ್ಕಳು ಖಂಡಿತ ಕೇಳುತ್ತಾರೆ. 
  • ಗುರುಹಿರಿಯರಿಗೆ ಹೇಗೆ ಗೌರವ ಕೊಡಬೇಕು ಎಂದು ನಾವು ನಡೆದು ಅವರಿಗೆ ತೋರಿಸಬೇಕಿದೆ.
  •  ದೇವರಮೇಲಿನ ನಂಬಿಕೆ ನಮ್ಮ ಜೀವನಕ್ಕೆ ಎಷ್ಟು ಮುಖ್ಯ ಎಂದು ತಿಳಿಸಬೇಕಿದೆ.
  •  ಶಿಸ್ತು, ಶ್ರದ್ಧೆ,ಪರಿಶ್ರಮಗಳು ಸಾಧನೆಗೆ ಅಡಿಪಾಯ ಎಂದು ಅವರಿಗೆ ತಿಳಿಸಬೇಕಿದೆ. 
  • ಹಣದ ಬೆಲೆ ಏನು? ಗುಣದ ಬೆಲೆ ಏನು? ಎನ್ನುವುದು ಅವರಿಗೆ ಅರ್ಥವಾಗಬೇಕಿದೆ.
  •  ಸರಿ ತಪ್ಪುಗಳ ವ್ಯತ್ಯಾಸ ಅರ್ಥಮಾಡಿಸಬೇಕಿದೆ. 
  • ಸೂಕ್ಷ್ಮ ಸಂವೇದನೆಗಳನ್ನು ಕಲಿಸಬೇಕಿದೆ. 
  • ಹೊಂದಿಕೊಳ್ಳುವ ಗುಣವೂ ಬಹಳ ಮುಖ್ಯ. 
  • ಮನೆಯ ಕೆಲಸಗಳನ್ನೂ ಮಾಡುವ ತಿಳುವಳಿಕೆ,ಆಸಕ್ತಿ, ಜಾಣ್ಮೆಯೂ ಅವರಿಗೆ ಅಗತ್ಯವಿದೆ. 

 ಮಕ್ಕಳು ಹಿರಿಯರು ಹೇಳಿದಂತೆ ಕೇಳಬೇಕು ಎಂಬ ಮಾತು ಈಗಿನ ಕಾಲಕ್ಕೆ ಹೊಂದಿಕೊಳ್ಳುವುದು ತುಸು ಕಷ್ಟ. ಬುದ್ಧಿವಂತರು, 'ಕಾಲಕ್ಕೆ ತಕ್ಕ ಕೋಲ' ಎಂಬಂತೆ ಮಕ್ಕಳ ಅಭಿರುಚಿಗೆ, ಇಷ್ಟಕ್ಕೆ ತಕ್ಕಂತೆ ಹೊಂದಿಕೊಂಡು ಹೋಗುತಿದ್ದಾರೆ. ಅದು ನಿಜವಾಗಿ ಇಂದಿನ ಅನಿವಾರ್ಯತೆ.

ಮಳೆ ಕೈಗೆ ಸಿಗದ ಮಾಯಾಮೃಗವಾಗದೆ ಇರಲಿ

 ಮಳೆ ಹೇಗಿತ್ತು

ಸಮಯಕ್ಕೆ ಸರಿಯಾಗಿ ಮಳೆ ಬೆಳೆ ಆಗುತಿದ್ದ ಕಾಲವೊಂದಿತ್ತು. ಇಂತಹ ನಕ್ಷತ್ರದಲ್ಲಿ ಈ ರೀತಿಯ ಮಳೆ ಬರುತ್ತದೆ ಎಂದು ಹಿರಿಯರು ಕರಾರುವಾಕ್ಕಾಗಿ ಹೇಳುತ್ತಿದ್ದರು. ಅದು ಅವರ ಜೀವನಾನುಭವದ ಮಾತಾಗಿತ್ತು. ವಿಶೇಷ ಪರಿಣತಿ, ಆಧುನಿಕ ತಂತ್ರಜ್ಞಾನ ಬೇಕಾಗಿರಲಿಲ್ಲ.ಅವರ ಜೀವನದಂತೆ ಬಹಳ ಶಿಸ್ತು, ಸಂಯಮ ಪಾಲಿಸುತ್ತಿತ್ತು. ಅವರು ಪ್ರಕೃತಿಯ ಜೊತೆ ಹೊಂದಿಕೊಂಡು ಅದನ್ನು ಗೌರವಿಸುತ್ತಾ ಬದುಕುತ್ತಿದ್ದರು. ಅವರ ಲೆಕ್ಕಾಚಾರಗಳು ಎಂದೂ ತಲೆಕೆಳಗಾಗುತ್ತಿರಲ್ಲ. ಬದುಕು ತುಂಬಾ ಸರಳ ಸುಂದರವಾಗಿತ್ತು.

ಇಂದು ಏನಾಗಿದೆ ಮಳೆಗೆ?

ನಮ್ಮ ಬುದ್ದಿವಂತಿಕೆ ನಮಗೇ ಮುಳುವಾಗಿದೆ. ಪ್ರಕೃತಿಯ ಜೊತೆ ಹೊಂದಿಕೊಂಡು, ಅಗತ್ಯ ಬದಲಾವಣೆಗಳನ್ನು ನಮ್ಮಲ್ಲಿ ಮಾಡಿಕೊಳ್ಳುವ ಬದಲು ಪ್ರಕೃತಿಯನ್ನೇ ಬದಲಾಯಿಸಲು ಹೊರಟಿದ್ದೇವೆ. ನಾವು ಅಂದುಕೊಂಡ ಪಲಿತಾಂಶವನ್ನಷ್ಟೇ ಕೊಡಲು ಅದೇನು ಕಂಪ್ಯೂಟರ್ ಪ್ರೋಗ್ರಾಮಿಂಗ್ ಅಲ್ಲ. ನಿರ್ಜೀವ ವಸ್ತುವಲ್ಲ.  ತನ್ನ್ನದೇ ಜೀವಂತಿಕೆಯಿಂದ ಬದುಕುತ್ತಾ ,  ತನ್ನ ನಿಯಮಗಳನ್ನು ತಾನೇ ರೂಪಿಸುತ್ತ ಸ್ವತಂತ್ರವಾಗಿ ಬದುಕುತ್ತಿರುವ ಜೀವವಾಹಿನಿ ಅದು. ನಮ್ಮ ಮಧ್ಯಪ್ರವೇಶ ಅದಕ್ಕೆ ಇಷ್ಟವಾಗುವುದಿಲ್ಲ. ಅದನ್ನರಿಯದ ಪರಮ ಮೂರ್ಖರು ನಾವು.  ಕೊನೆಗೆ, ಏನು ಮಾಡಲು ಹೋಗಿ... ಏನು ಮಾಡಿದೆ ನೀನು ಎಂದು ಹಾಡುವಂತೆ ಆಗುತ್ತದೆ.  ನಮ್ಮ ಅನಗತ್ಯ ಮಧ್ಯಸ್ಥಿಕೆಯಿಂದ ಪ್ರಕೃತಿಯ ಸಮತೋಲನ ತಪ್ಪಿ ಹೋಗಿದೆ. ಇನ್ನಾದರೂ ಮೌನವಾಗಿ ಪ್ರಕೃತಿಯ ಆದೇಶಗಳನ್ನು ಪಾಲಿಸೋಣ .  ಮಳೆಗಾಗಿ ಜಾತಕಪಕ್ಷಿಯಂತೆ ಕಾಯುವ ಸಂಕಟ ತಪ್ಪಲಿ . ಮಳೆಗಾಲ ಶುರುವಾದ ಮೇಲೆ ಎಲ್ಲಿ ಏನಾಗುವುದೋ ಎಂಬ ಭಯ ತಪ್ಪಲಿ .  ಬಿರುಗಾಳಿ, ಅತಿವೃಷ್ಟಿ, ಗುಡ್ಡಕುಸಿತ ನಿಲ್ಲಲಿ..  ಗುಡುಗು ಸಿಡಿಲು ನಿಲ್ಲಲಿ. ಮಳೆಯಾರ್ಭಟ ಕಡಿಮೆಯಾಗಲಿ , ಎಂದೆಲ್ಲ ಬಯಸುವ ನಾವು ಅದಕ್ಕಾಗಿ ಪ್ರಯತ್ನಿಸೋಣ . ಮೌನವಾಗಿ ಪ್ರಕೃತಿಯ ಆಗುಹೋಗುಗಳನ್ನು ಗಮನಿಸೋಣ. ಮಳೆಗಾಗಿ ಕಾಯೋಣ , ಕೃತಕ ಮಳೆ ಬೇಡ.. ಕೃತಕ ನೆರೆ , ಮತ್ತದರ ಬರೆ ಯಾವುದೂ ಬೇಡ. ಮೌನವಾಗಿ ಕಾಯೋಣ ಮಾಡಿದ ತಪ್ಪುಗಳಿಗಾಗಿ. ಮಳೆ ಬೇಕಾದಾಗ ಬಾರದೆ, ಬಂದಾಗ ಅತಿಯಾಗಿ ಬಂದು ತಲ್ಲಣ ಸೃಷ್ಟಿಸುತ್ತಿದೆ. ಅನಾಹುತಗಳ ಸರಮಾಲೆಯನ್ನು ಉಂಟುಮಾಡುತ್ತಿದೆ. ಕೈಗೆಟುಕದ ನಕ್ಷತ್ರದಂತೆ, ಮಳೆ ಮಾಯಾಮೃಗವಾಗದಿರಲಿ!  ಮನಪೂರ್ವಕವಾಗಿ ಬೇಡೋಣ .... 






ಮಾರ್ಜಾಲ ಮಾಯೆ

ಬೆಕ್ಕುಗಳೆಂದರೆ ಯಾರಿಗೂ ಅಷ್ಟೇನೂ ಒಲವಿಲ್ಲ. ಅವುಗಳ ಅಂತರಂಗ ಅರಿವಾದರೆ ತಾನೇ! , ಇಷ್ಟವಾಗುವುದು. ಅವೇನೂ ಕೃತಘ್ನ ಪ್ರಾಣಿಗಳಲ್ಲ.. ಅನ್ನ ಕೊಡುವ ಕೈಯನ್ನು   ಅದು ಮರೆಯುವುದಿಲ್ಲ. ಮುಖ ನೋಡಿ ಗುರುತಿಸಿ ಮಿಯಾಂ ಎಂದು ಕೂಗಿ, ಹಿಂಬಾಲಿಸಿ, ಬಾಯಿ ಅಗಲಿಸಿ ನಮ್ಮನ್ನು ಖುಷಿ ಪಡಿಸುವ ಅವುಗಳ ಮೂಕ ಪ್ರೇಮ ಮನ ತಣಿಸುತ್ತದೆ.. ಸಮಯವಾಗಿದೆ ಎಂದು, ಕೂಗಿ ನಿದ್ದೆಯಿಂದ ಎಬ್ಬಿಸಿ, ನಮ್ಮ ಹಿಂದೆ ಬಂದು ಹಾಲು ಕೊಡು ಎಂದು ಪಾತ್ರೆಯತ್ತ ನೋಡುತ್ತವೆ. ನಿಜ ತಾನೆ.. ನಾವು ಎಷ್ಟು ಹೊತ್ತಿಗೆ ಎದ್ದೇಳುತ್ತೇವೆ?, ಏನೇನು ಮಾಡುತ್ತೇವೆ ಪ್ರತಿಯೊಂದನ್ನೂ ಅವು ನೆನಪಿಟ್ಟುಕೊಳ್ಳುತ್ತವೆ. ಅದಕ್ಕೆ ಸರಿಯಾಗಿ ಹೊಂದಿಕೊಂಡು ನಡೆದುಕೊಳ್ಳುತ್ತವೆ. 

ಊಟದ ತಟ್ಟೆಯ ಮುಂದೆ ಮೌನವಾಗಿ ಕುಳಿತು ನಮ್ಮ ಮುಖ ನೋಡಿದರೆ , ಹಸಿವಾಗುತ್ತಿದೆ, ಅನ್ನ ಹಾಕಿ ಎಂದು ಅರ್ಥ. ನೀರಿನ ಪಾತ್ರೆಯ ಹತ್ತಿರ ಕೂತು ಮಿಯಾವ್ ಎಂದರೆ ನೀರು ಬೇಕು ಎಂದರ್ಥ. ಯಾವ ಸಮಯದಲ್ಲಿ ಯಾರು ಯಾವ ತಿಂಡಿ ಕೊಡುತ್ತಾರೋ ಅವರ ಬಳಿ ಹೋಗಿ ಅದೇ ತಿಂಡಿಗಾಗಿ ಕೂಗುತ್ತವೆ ಇಲ್ಲ ಹಿಂಬಾಲಿಸುತ್ತವೆ.

ಸಸ್ಯಾಹಾರಿಗಳ ಮನೆಯಲ್ಲಿ ಹಾಲು ಮೊಸರು ತಿಂದು ನೆಮ್ಮದಿಯಾಗಿ ಇರುವ ಅವು ಮಾಂಸಾಹಾರಿಗಳ ಮನೆಯಲ್ಲಿ ಮೀನಿನ ಪುಚ್ಚೆ ಎಂದು ಕರೆಸಿಕೊಳ್ಳುತ್ತವೆ. ಪರಿಸರಕ್ಕೆ ಹೊಂದಿಕೊಂಡು ಬಾಳುವ ಗುಣ ಅವುಗಳ ರಕ್ತದಲ್ಲೇ ಇದೆ. ಮರಿಗಳನ್ನು ಕೈಯಲ್ಲಿ ಹಿಡಿದು ಅಭ್ಯಾಸ ಮಾಡಿದರೆ ಅವು ನಮ್ಮಲ್ಲಿ ಹೆಚ್ಚು ವಿಶ್ವಾಸದಿಂದ ಇರುತ್ತವೆ. ಇಲ್ಲವಾದರೆ ನಮ್ಮಿಂದ ದೂರವೇ ಇರುತ್ತವೆ. ಸಣ್ಣ ಮರಿಗಳು ಮನೆಯೊಳಗೆ ಚಿಚ್ಚಿ ಸುಸ್ಸು ಮಾಡುತ್ತವೆ.ದೊಡ್ಡವಾದ ಮೇಲೆ ಹೊರೆಗೆ ಹೋಗುತ್ತವೆ.

ಕೆಲವೊಂದು ಉಪದ್ರವಕಾರಿ ಬೆಕ್ಕುಗಳೂ ಇರುತ್ತವೆ.ಕದ್ದು ಹಾಲು ಕುಡಿಯುವುದು, ಮೀನು ತಿನ್ನುವುದು, ಜಗಳವಾಡುವುದು, ಮರಿಗಳನ್ನು ತಿನ್ನುವುದು ಮಾಡುತ್ತವೆ. 

ಅದೇನು ಇರಲಿ ಮುದ್ದು ಮಾಡಿದರೆ ಮನೆಮಕ್ಕಳಂತೆ ಇರುತ್ತವೆ. ಅವುಗಳ ಜೊತೆ ಮಾತನಾಡುವುದು, ಆಟವಾಡುವುದು ನಮ್ಮ ಒತ್ತಡಗಳಿಂದ ಹೊರಬಂದು ನೆಮ್ಮದಿಯಾಗಿ ಇರಲು ಸಹಾಯಮಾಡುತ್ತದೆ.









ಕೂದಲು ಉದುರುವಿಕೆಗೆ ಕಾರಣ, ಪರಿಹಾರ

ಸಾಕಷ್ಟು ಜನ,ತಮ್ಮ ಉದುರುವ ಕೂದಲಿನ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ನಮ್ಮ ಉಗುರು,ಚರ್ಮದಂತೆ(ಗಾಯಗಳಾದಾಗ) ಕೂದಲೂ ಕೂಡ ನಿರಂತರವಾಗಿ ಬೆಳೆಯುವ ಕೆಲವೇ ಕೆಲವು ಅಂಗಗಳಲ್ಲಿ ಒಂದು. ಆದರೆ ಅದು ಪ್ರತಿಯೊಬ್ಬರಲ್ಲಿ ಬಿನ್ನವಾಗಿರುತ್ತದೆ ಮತ್ತು ಅದಕ್ಕೆ ಕಾರಣಗಳು ಹಲವಾರು. ಅನುವಂಶೀಯತೆ, ಪರಿಸರ, ಆಹಾರ,ಅಭ್ಯಾಸಗಳಿಂದ ಕೂದಲಿನ ಪ್ರಮಾಣ,ಬಣ್ಣ, ಬೆಳವಣಿಗೆಗಳು ಅವಲಂಬಿತವಾಗಿವೆ. ಬೇರೆಯವರ ಜೊತೆ ಹೋಲಿಸಿಕೊಂಡು ಬೇಸರಪಟ್ಟುಕೊಳ್ಳಬಾರದು. 
  
ಕೂದಲು ಉದುರಲು ಕಾರಣಗಳು

  • ಕೆಲವೊಂದು ಔಷಧಗಳ ಬಳಕೆ, ಉದಾಹರಣೆಗೆ ಕಾನ್ಸರ್ ಚಿಕಿತ್ಸೆ, ಹಾರ್ಮೋನ್ ಚಿಕಿತ್ಸೆಗಳು ಇತ್ಯಾದಿ.
  • ನೀರಿನ ಬದಲಾವಣೆ (ಹಳ್ಳಿಯಲ್ಲಿದ್ದವರು ಪಟ್ಟಣಕ್ಕೆ ಹೋದಾಗ, vice versa)
  • ಹವಾಮಾನ ಬದಲಾವಣೆ,(ಮಳೆಗಾಲ, ಚಳಿಗಾಲ)
  • ಒತ್ತಡದಿಂದ (ಚಿಂತೆಯಿಂದ ಆರೋಗ್ಯ ಹಾಳಾಗುತ್ತದೆ)
  • ಜೀವನಶೈಲಿಯ ಬದಲಾವಣೆ,(ಆಹಾರ ನಿದ್ದೆಯಲ್ಲಿ ವ್ಯತ್ಯಾಸ) 
  • ಥೈರಾಯ್ಡ್ ಸಮಸ್ಯೆ ಕೂಡ ಕೂದಲಿನ ಸಮಸ್ಯೆಗೆ ಒಂದು ಕಾರಣ.
  • ಅನುವಂಶೀಯ ಕಾರಣಗಳು(ಹೆತ್ತವರಲ್ಲಿ,ಒಡಹುಟ್ಟಿವರಲ್ಲಿ ಕಡಿಮೆ ಕೂದಲು ಇರುವಾಗ).
  • ವಯಸ್ಸಿನ ಕಾರಣ(ನಲವತ್ತರ ನಂತರ ಕೂದಲು ತೆಳ್ಳಗಾಗುತ್ತದೆ)

ಸರಳ ಪರಿಹಾರಗಳು

 ನಮ್ಮ ಕೆಲವೊಂದು ಪ್ರಯತ್ನಗಳು,ನಮ್ಮ ಕೂದಲನ್ನು ಇನ್ನಷ್ಟು ಹಾಳಾಗದಂತೆ ತಡೆಯಬಲ್ಲವು. ಇರುವ ಪರಿಸ್ಥಿತಿ ಸುಧಾರಿಸಲು ಈ ಕೆಳಗಿನ ವಿಷಯಗಳು ಸಹಾಯ ಮಾಡಬಲ್ಲವು. ನಾವು ಬದಲಾಯಿಸಲು ಆಗದ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು.

  •  ಸೊಪ್ಪು,ತರಕಾರಿಗಳ ಸೇವನೆ ಬಹಳ ಮುಖ್ಯ.
  •  ವಾರದಲ್ಲಿ ಎರಡು ಮೂರು ಬಾರಿ ತಲೆ ಸ್ನಾನ ಮಾಡಬೇಕು.
  • ಸ್ನಾನದ ಮೊದಲು ನಮಗೆ ಸರಿಹೊಂದುವ ಎಣ್ಣೆ ಹಚ್ಚಿ ಮಾಲೀಸು ಮಾಡಬೇಕು. 
  • ಸ್ನಾನದ ನೀರು ಹೆಚ್ಚು ಬಿಸಿ ಇರಬಾರದು. 
  •  ಸೌಮ್ಯವಾದ, ಅಲ್ಪ ಪ್ರಮಾಣದ ಶಾಂಪೂ ಬಳಸಬೇಕು. 
  •  ಒದ್ದೆ ತಲೆಯನ್ನು ಬಾಚಬಾರದು.
  •  ಬಾಚಣಿಗೆಯನ್ನು ಆಗಾಗ ಸ್ವಚ್ಚಗೊಳಿಸಿ ಉಪಯೋಗಿಸಬೇಕು. 
  •  ಚೆನ್ನಾಗಿ ನೀರು ಕುಡಿಯಬೇಕು.
  •  ಕೂದಲು ಯಾಕೆ ಉದುರುತ್ತಿದೆ ಎಂಬುದರ ಕಾರಣ ತಿಳಿದರೆ ಪರಿಹಾರವೂ ಸುಲಭ. 
  •  ಕೆಲವೊಂದು ಸಮಯದಲ್ಲಿ ಕೂದಲು ಸಹಜವಾಗಿಯೇ ಹೆಚ್ಚು ಉದುರುತ್ತದೆ. ಉದಾಹರಣೆಗೆ, ಮಳೆಗಾಲದಲ್ಲಿ ಸಹಜವಾಗಿ ಕೂದಲು ಉದುರುತ್ತದೆ. ಮತ್ತು ಆ ಜಾಗದಲ್ಲಿ ಹೊಸ ಕೂದಲು ತಾನಾಗಿ ಹುಟ್ಟುತ್ತದೆ. 
  •  ತುಂಬಾ ಕಡಿಮೆ ಸಮಯದಲ್ಲಿ, ಹೆಚ್ಚು ಹೆಚ್ಚು ಕೂದಲು ಉದುರಿದರೆ ಮಾತ್ರ ಸಮಸ್ಯೆ. ಸಮಸ್ಯೆಗಳು ತೀವ್ರವಾಗಿದ್ದರೆ, ವೈದ್ಯರನ್ನು ಕಾಣಬೇಕು. 
  • ತಲೆಹೊಟ್ಟು ಉಂಟಾದರೆ ಮೆಂತೆ ಅಥವಾ ದಾಸವಾಳದ ಹೇರ್ ಪ್ಯಾಕ್ ಮಾಡಿ.

 ಕೆಲವೊಂದು ಸರಳ ಉಪಾಯಗಳು, ಪರಿಸ್ಥಿತಿಯನ್ನು ನಿಭಾಯಿಸಲು ಸಹಾಯಮಾಡಬಲ್ಲವು. 

ಸರಳ ಉಪಾಯಗಳು

  • ವಿಗ್ ಧರಿಸಬಹುದು. 
  • ತಲೆಯನ್ನು ಪೂರ್ತಿ ಬೋಳಿಸಿ, ಹೊಳೆಯುವ ದುಂಡಗಿನ ತಲೆಯನ್ನು ಹೊಂದಿರುವುದು ಈಗಿನ ಟ್ರೆಂಡ್.
  • ಹಣಕಾಸಿನ ಅನುಕೂಲವಿದ್ದವರು, ಕೂದಲು ಕಸಿ ಮಾಡಿಸಿಕೊಳ್ಳಬಹುದು.

ಇನ್ನೊಂದು ವಿಷಯ. ಇರುವ ಪರಿಸ್ಥಿತಿಯನ್ನು ಸುಧಾರಿಸಲು ಆಗುವ ಎಲ್ಲ ಪ್ರಯತ್ನವನ್ನೂ ಮಾಡೋಣ. ಅದರ ಹೊರತಾಗಿಯೂ, ಯಾವದೇ ಪ್ರಗತಿ ಕಾಣದಿದ್ದರೆ, 
ವಾಸ್ತವವನ್ನು ಒಪ್ಪಿಕೊಳ್ಳುವುದು ಜಾಣತನ. 

ನಗು ಮಗುವಿನಂತೆ ಇರಲಿ

 ನಗೆಯು ಅರಳಲಿ ಮುಖಾರವಿಂದದಲಿ, ಅದು ಮಗುವಿನಂತಿರಲಿ, ಹೊಸ ನಗುವ ಮೂಡಿಸಲಿ.. 

 ನಗುವಿನ ವಿಶೇಷತೆ

ನಗುಮೊಗದ ಸೌಂದರ್ಯವೇ ಅದ್ಬುತ, ಅಪರಿಮಿತ. ಮುಂದಿರುವವರನ್ನು ಸೂಜಿಗಲ್ಲಿನಂತೆ ಸೆಳೆಯುವ ಶಕ್ತಿ ಅದಕ್ಕಿದೆ. ಒಂದು ನಗುವಿನ ಹಿಂದೆ ಹಲವಾರು ಕಾರಣಗಳು, ಉದ್ದೇಶಗಳು ಇರಬಹುದು. ಅದು ಎಲ್ಲರನ್ನೂ ಉದ್ದಾರ ಮಾಡದಿದ್ದರೂ ಪರವಾಗಿಲ್ಲ, ಯಾರ ಬದುಕನ್ನೂ ಹಾಳು ಮಾಡಬಾರದು ಅಷ್ಟೇ.

  • ಅಪರಿಚಿತರನ್ನೂ  ಪರಿಚಿತರನ್ನಾಗಿ ಮಾಡಲು ಒಂದು ಮುಗ್ಧ ನಗು ಸಾಕು.
  •  ಎಷ್ಟೋ ಸಲ ಒಂದು ನಗು ಸ್ನೇಹಿತರನ್ನು, ಆತ್ಮೀಯರನ್ನು ಗಳಿಸಿಕೊಡುತ್ತದೆ . 
  • ಹಾಗೇ ಕಡಿದುಹೋದ ಸಂಬಂಧಗಳನ್ನು ಜೋಡಿಸಲು ಒಂದು ಕಿರುನಗೆ ಸಾಕು. ಎಲ್ಲ ಸಿಟ್ಟು ಕರಗಿ ನೀರಾಗಿ ಬಿಡುತ್ತದೆ. 
  • ಹಳೆಯದೆಲ್ಲ ಮರೆತು ಸ್ನೇಹ ಪ್ರೀತಿ ಮತ್ತೆ ನೀರಿನಂತೆ ಹರಿಯಲಾರಂಭಿಸುತ್ತದೆ. 
  • ಪುಟ್ಟ ಮಕ್ಕಳ ಮುಗ್ಧನಗುವಿನಲ್ಲಿ ಯಾವುದೇ ಕಲ್ಮಶಗಳಿಲ್ಲ. ಅದು ಎಲ್ಲರಲ್ಲೂ ಹೊಸದೊಂದು ಹುರುಪನ್ನು ಖುಷಿಯನ್ನೂ ತುಂಬುತ್ತದೆ. 
  • ವಯೋವೃದ್ಧರು ತಮ್ಮ ಬೊಚ್ಚು ಬಾಯಿ ಅಗಲಿಸಿ ನಕ್ಕರೆ, ಮನತುಂಬಿ ಬರುತ್ತದೆ. 
  • ಹಲವಾರು ಬಾರಿ, ನಗು ಒಂದು ಸಾಂತ್ವಾನದಂತೆ ಕೆಲಸ ಮಾಡುತ್ತದೆ. 
  • ಯಾರಾದರೂ ದುಃಖದಲ್ಲಿದ್ದಾಗ, ಏನು ಹೇಳಬೇಕೆಂದು ತಿಳಿಯದೆ ಒದ್ದಾಡುವಾಗ,  ಸಣ್ಣನಗುವೊಂದು ನಮ್ಮ ಮನದ ಭಾವನೆಯನ್ನು ಅವರಿಗೆ ದಾಟಿಸುತ್ತದೆ. 
  • ನಮ್ಮ ನಗು ಮನಸಿನ ಕನ್ನಡಿಯಂತೆ ವರ್ತಿಸುತ್ತದೆ. ಬುದ್ಧಿವಂತರು ಆ ನಗುವಿನ ಅರ್ಥವನ್ನು ಗುರುತಿಸಬಲ್ಲರು. 
ಕೆಟ್ಟ ನಗು

ಆದರೆ ಕೆಲವೊಂದು ನಗು ಕೆಟ್ಟದಾಗಿರುತ್ತದೆ. ಅದರ ಅರ್ಥ ನೋಡಲು ಚೆನ್ನಾಗಿಲ್ಲ ಎಂದಲ್ಲ. ಉದ್ದೇಶ ಚೆನ್ನಾಗಿಲ್ಲ ಎಂದರ್ಥ. 
  • ಇನ್ನೊಬ್ಬರನ್ನು ನೋಡಿ ಅಪಹಾಸ್ಯ ಮಾಡಿ ನಗುವುದು, 
  • ವ್ಯಂಗ್ಯವಾಗಿ ನಗುವುದು, 
  • ಅಹಂಕಾರದಿಂದ ನಗುವುದು, 
  • ಅಸೂಯೆಯಿಂದ ನಗುವುದು
 ಯಾವುದೂ ಒಳ್ಳೆಯ ಲಕ್ಷಣಗಳಲ್ಲ. ಅದು ನಮ್ಮ ಮುಂದಿರುವವರನ್ನು ನೋಯಿಸಬಹುದು. ಖುಷಿಯನ್ನು ಹಾಳು ಮಾಡಬಹುದು. ಅಂತಹ ನಗುವಿನಿಂದ, ಜನರಿಂದ ದೂರವಿದ್ದಷ್ಟೂ ನಮಗೆ ನೆಮ್ಮದಿ. ಇತರರಿಂದ ಒಳಿತನ್ನು ಬಯಸುವ ನಾವು,  ಇತರರಿಗೂ ಒಳಿತು ಮಾಡೋಣ ,  ನಿಷ್ಕಲ್ಮಶ ಮನಸಿನಿಂದ, ನಿರಾತಂಕದಿಂದ ನಗೋಣ, ನಗಿಸೋಣ...









ಅಂಬರ ತಾರೆ

ನಮ್ಮಿಂದ ದೂರವಾಗಿ ಬಹಳ ಸಮಯವಾದರೂ, ನಿರಂತರ ನೆನಪುಗಳಲ್ಲಿ ಕಾಡಿ, ನಮ್ಮನ್ನು ಖುಷಿಪಡುವ ಮುದ್ದು ಪ್ರಾಣಿಗಳೇ ಈ ಅಂಬರ ತಾರೆಗಳು.


ತುಕ್ಕು

ನಮ್ಮ ಹಟ್ಟಿಯಲ್ಲಿ ಶುಕ್ರವಾರ ಜನಿಸಿದ ಅದೃಷ್ಟವೇ ಈ ತುಕ್ಕು. ನಮ್ಮ ಮೊದಲ ಜೆರ್ಸಿ ಕರು. ಕಂದು ಬಣ್ಣದ ಮುದ್ದುಮುಖದ ದೊಡ್ಡ ಕರು. ಅವಳು ಬೆಳೆದಂತೆ ಮುದ್ದೂ ಬೆಳೆಯಿತು. ಬರೀ ನೋಟದಲ್ಲಿ ಮಾತ್ರವಲ್ಲ, ಗುಣದಲ್ಲೂ ಅವಳು ಮುದ್ದು. ಮುಂದೆ ಬಂದರೆ ಹಾಯಬೇಡ, ಹಿಂದೆ ಬಂದರೆ ಒದೆಯಬೇಡ, ನೀತಿಯವಳು. ಅವಳು ಹೇಳಿದ್ದು ಕೇಳುವ ಜಾಣಮರಿ. ಹೊಟ್ಟೆ ತುಂಬಿದರೆ ಸಾಕು ಎಂದು ಹಾಕಿದ್ದನ್ನು ತಿನ್ನುವವಳು. ಹುಲ್ಲುಮೇಯಲು ಕರೆದೊಯ್ಯುವಾಗ ಯಾವುದೇ ತಕರಾರಿಲ್ಲ. ಹಾಲು ಕರೆಯುವಾಗಲೂ ಅಷ್ಟೇ. ನಿಂತಲ್ಲಿಂದ ಅಲುಗಾಡದೆ ನಿಂತಿರುತ್ತಾಳೆ. ಕರು ಹಾಕಿ ೩ ತಿಂಗಳಷ್ಟೇ ಅದರ ಗೋಜು. ಆಮೇಲೆ ಕರು ಬೇಕಾಗಿರಲಿಲ್ಲ . ಹಾಲು ಕರೆಯುವಾಗ  ನಮ್ಮ ತಲೆಯಲ್ಲಿ ಹೂ ಇದ್ದರೆ ಮಾತ್ರ ಮೊದಲೇ ಕೊಟ್ಟು ಬಿಡಬೇಕು. ಇಲ್ಲವಾದರೆ ಎಳೆದು ತಿನ್ನುತ್ತಿದ್ದಳು. 

ಅತ್ತಿಯ ಹಣ್ಣು ಗಳೆಂದರೆ ಬಹಳ ಇಷ್ಟ ಅವಳಿಗೆ. ಮನೆ ಮುಂದೆ ಸ್ವಲ್ಪ ಎತ್ತರದಲ್ಲಿ ಇರುವ ಮರದಿಂದ ಹಣ್ಣು ಗಳನ್ನು ಬಾಯಿ ಹಾಕಿ ಚಪ್ಪರಿಸುತ್ತ ತಿನ್ನಲು  ಶುರುಮಾಡಿದರೆ ವಾಪಸು ಬರುತ್ತಲೇ ಇರಲಿಲ್ಲ. ಸಾಕು ಬಾ ಎಂದರೂ ಕೇಳದೇ ತಿನ್ನುತ್ತಾ ಇರುತ್ತಿದ್ದಳು. ನಂತರ ಒಂದು ಸಣ್ಣ ಕಡ್ಡಿ ತೋರಿಸಿದರೆ  ಸಾಕು ಓಡಿ ಬರುತ್ತಿದ್ದಳು. ಎಷ್ಟೆ ಹೇಳಿದರು, ಬೈ ಹುಲ್ಲಿನ ಮೂಟೆ ಗೆ ಮೈ ಉಜ್ಙೀದರೇನೇ ಅವಳಿಗೆ ಸಮಾಧಾನ.

ತುಕ್ಕುವಿನ ಅಮ್ಮ ಪುಟ್ಟು. ಬಹಳ ಜೋರು. ಸುಮ್ಮನೆ ಅವಳನ್ನು ಹಾಯುತಿದ್ದಳು. ಬಹಳ ವರ್ಷಗಳ ನಂತರ ಒಂದು ದಿನ ತುಕ್ಕುವಿಗೆ ಸಿಟ್ಟು ಬಂದು ಪುಟ್ಟವಿನ ಒಂದು ಕೋಡನ್ನು ಮುರಿದು ಬಿಟ್ಟಳು.ಆಮೇಲೆ ಪುಟ್ಟು ಎಂದು ಅವಳ ಜೊತೆ ಜಗಳವಾಡಲು ಹೋಗಲಿಲ್ಲ.


ಹೀಗಿದ್ದ ತುಕ್ಕು ವಿಗೆ ಒಮ್ಮೆ ಕೆಚ್ಚಲು ಬಾವು ಶುರುವಾಯಿತು. ಎಷ್ಟೇ ಮದ್ದು ಮಾಡಿ ನೋಡಿದರೂ ಗುಣವಾಗಲೇ ಇಲ್ಲ. ಅವಳು ಬಹಳ ಕೃಶವಾದಳು. ನಿಂತಲ್ಲೇ ನಿಲ್ಲುತ್ತಿದ್ದಳು. ಇಲ್ಲವಾದರೆ ಮಲುಗುತ್ತಿದ್ದಳು. ‌ಸ್ವಲ್ಪ ಏನಾದರೂ ತಿನ್ನುತಿದ್ದಳು. ತಿಂಗಳು ಕಳೆದರೂ ಅವಳ ಪರಿಸ್ಥಿತಿ ಸುಧಾರಿಸುವ ಬದಲು ಹಾಳಾಗುತ್ತಾ ಹೋಯಿತು. ಮಲಗಿದಲ್ಲಿಂದ ಏಳಲಾಗದೆ ಕಣ್ಣೀರು ‌ಸುರಿಸುತಿದ್ದಳು. ಅವಳನ್ನು ನೋಡಿ ಹೃದಯ ಹಿಂಡಿದಂತಾಗುತಿತ್ತು. ಒಂದು ದಿನ ಎಲ್ಲಾ ನೋವಿಗೆ ಕೊನೆ ಹಾಡಿ, ತುಕ್ಕು ನಮ್ಮಿಂದ ದೂರವಾದಳು. ಆದರೆ ಮನಸಿನಿಂದ ದೂರ ಹೋಗಲೇ ಇಲ್ಲ...


CBSC ಯಿಂದ ಸ್ಟೇಟ್ ಬೋರ್ಡ್ ಗೆ

ಈಗೀಗ ಹೆಚ್ಚಾಗಿ ಮಕ್ಕಳು 10ನೇ ತರಗತಿಯವರೆಗೆ CBSC ಬೋರ್ಡಿನಲ್ಲಿ ಕಲಿಯುತ್ತಾರೆ. ಕೆಲವೊಂದು ವಿದ್ಯಾರ್ಥಿಗಳು ಪಿಯುಸಿಯನ್ನು ಅದೇ ಬೋರ್ಡಿನಲ್ಲಿ ಮುಂದುವರೆಸುತ್ತಾರೆ. ಹೆಚ...