ವಿಷಯಕ್ಕೆ ಹೋಗಿ

ತಾತ

ಕಳೆದು ಹೋದ ನಿನ್ನೆಗಳ,
ನೆನಪುಗಳ ತಡಕಿದರೆ,
ಭಾರವಾದ ನಿಟ್ಟುಸಿರೊಂದು
ಆಸರೆಯಾಗುತ್ತದೆ.
ಆಲದ ಮರದ ಆಳವಾದ 
ಬೇರುಗಳು ನೆನಪಿನಂಗಳದಲ್ಲಿ 
ಜೋಕಾಲಿಯಾಡುತ್ತದೆ.

ಹೊಣೆಗಾರಿಕೆಯ ಭಾರಕ್ಕೆ ಬಾಗಿದ ಬೆನ್ನಿನ
ಹಣ್ಣಾಗಿ ಮಾಗಿದ ಬೆಳ್ಳಿ ಕೂದಲಿನ 
ಊರಗಲ ಬೊಚ್ಚು ಬಾಯಗಲಿಸಿ
ಮಗುವಿನಂತೆ ನಗುವ ಆ ಕರ್ಣನ
ಆಲದಾ ಮರದಂತೆ ಜಗದಗಲ ಚಾಚಿ
ತನ್ನ ಚಾಚುವಿಕೆಯ ಕೆಳಗೆ ನೆರಳಾಗಿ 
ಬೆಳಕನ್ನು ಚೆಲ್ಲಿ, ಎಳೆತರುಗಳಿಗೆ
ಆಸರೆಯಾದ  ಹಿರಿಮರದಂತೆ,
ಬಾಯಾರಿದವರ ದಾಹ ಇಂಗಿಸುವ,
ಸದ್ದಿಲ್ಲದೆ ಹರಿವ ಗುಪ್ತಗಾಮಿನಿ,
ಈ ಮುದ್ದು ತಾತ.

ಎಲ್ಲ ಎಳೆಯರು ಕರೆದು 
ಸುತ್ತ ಸೇರಿಸಿಕೊಂಡು, ಕಡಲೆ ಬೇಕೇ, ಕಾಳು ಬೇಕೇ ಎನ್ನುತ್ತ , ರಾಮಾಯಣ,  ಭಾರತದ 
ಕತೆಗಳನು ತಿರು ತಿರುವಿ ಹೇಳುತ್ತ,
ಕಾಲು ಎಳೆಯುತ್ತ, ಬುದ್ಧಿ ಹೇಳುತ್ತ,
ಕಥೆಯ ಹೆಣೆಯುತ್ತ, ತಪ್ಪು ತಿದ್ದುತ್ತ 
ಕತ್ತಲದಾರಿಯಲ್ಲಿ ಜ್ಞಾನ ದೀಪವ
ಹಚ್ಚಿದವರು ಈ ಮುದ್ದು ತಾತ.

ಬಾಳೆಲ್ಲವೂ ತಾನು ದೀಪದ ಬತ್ತಿಯಂತೆ
ಉರಿದು, ಸುತ್ತೆಲ್ಲ ಬೆಳಕು ಬೀರಿ,
ಒಮ್ಮೆ ದ್ರೋಣನಂತೆ ಗುರುವಾಗಿ,‌
ಇನ್ನೊಮ್ಮೆ ಏನೂ ಅರಿಯದ ಮಗುವಾಗಿ, 
ವಾಮನರೂಪದ ತ್ರಿ ವಿಕ್ರಮನಾಗಿ,
ದಶಾವತಾರ ತೋರಿದ ತಾತ,
ಅನಾಯಾಸೇನ ಮರಣಂ,
ವಿನಾ ದೈನ್ಯೇನ ಜೀವನಂ ಮಾತಿನಂತೆ,
ಮಾತಿಲ್ಲದೆ ಮೌನಕ್ಕೆ ಜಾರಿ ಹೋದರು,
ಕನಸಲ್ಲೂ ಕಾಡುವ ಮುದ್ದು ತಾತ..






ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಮ್ಮನಾಗುವುದು ಎಂದರೆ

ಅಮ್ಮನಾಗುವುದಂದರೆ, ಬರೀ ಮಗಳಿಗೆ ತಾಯಿಯಾಗುವುದಲ್ಲ, ನನ್ನ ಹೆತ್ತಮ್ಮ ನನ್ನು ನಾನರಿಯುವುದು, ಅವಳ ಅಂತರಂಗವನು ನಾನುಭವಿ‌ಸುವುದು. ಅಮ್ಮ ಏಕೆ ‌ಸದಾ ಬಯ್ಯುತ್ತಾಳೆ, ಸದಾ ಸಿಡುಕುತ್ತಾಳೆ ? ನನ್ನ ಯಕ್ಷಪ್ರಶ್ನೆ ನನಗೇ ತಿರುಗಿದ ಬಾಣ ವಾಗಿದೆ , ಮುದ್ದಿನ ಮಗಳಿಂದ. ಈಗ ಅರಿವಾಗುತ್ತಿದೆ ಹೆತ್ತಮ್ಮನ ಒಡಲಾಳ, ಅವಳ ತಳಮಳ. ಅರಿಯದ ಎಳೆ ಹುಡುಗಿಗೆ ಎಲ್ಲ ವಿವರಿ‌ಸಲಾಗದೆ,  ಏನೂ ಹೇಳದೆಯೂ ಇರಲಾಗದು. ಬೆಂಕಿಯ ಮೇಲೆ ಕುಳಿತಂತೆ ಚಡಪಡಿಸುತ್ತಾ, ಹಣೆಯಲ್ಲಿ ಚಿಂತೆಯ ಗೆರೆ ಮೂಡಿಸುತ್ತಾ, ಒದ್ದಾಡುವ ಅಮ್ಮ ಕಾಣುತ್ತಾಳೆ ನನ್ನ ಮುಂದಿನ ಕನ್ನಡಿಯಲ್ಲಿ. ಅಂದುಕೊಂಡಷ್ಟು ಸುಲಭವಲ್ಲ,  ಅಂದುಕೊಂಡಂತೆ ಮಕ್ಕಳನ್ನು ಬೆಳೆಸುವುದು, ತಂತಿ ಯು ಮೇಲೆ ನಡೆದಂತೆ ಕ್ಷಣ ಮರೆತರೂ ಸೋಲು ಖಚಿತ.  ವಿದ್ಯೆಯ ಜತೆ  ವಿನಯವನೂ  ವಿವೇಕದ ಜತೆ  ವಿಧೇಯತೆಯನ್ನೂ, ಶಿಸ್ತಿನ ಜತೆ ಸಂಸ್ಕಾರವನ್ನೂ, ನೀತಿಯ ಜತೆ ನಿಯತ್ತನ್ನೂ ಕಲಿ‌ಸಬೇಕಿದೆ. ಅಡಿಗೆ ಮನೆಯ ಪಾಕದ ಜತೆ, ಸ‌‌ಹನೆಯ ತೂಕವನ್ನೂ, ಬುದ್ದಿಯ ಜತೆ ಶುದ್ದಿಯನ್ನೂ ಅರೆದರೆದು ಕುಡಿಸಬೇಕಿದೆ ಮೂಗು ಹಿಡಿದಾದರೂ.  ಮುದ್ದಿನ ಮಗಳ ನಾಳೆಗಳು ನಗುತಿರಲು, ಇಂದು ನಾನು ನಿಷ್ಠುರವಾಗಲೇಬೇಕಿದೆ, ಅಮ್ಮನ ತತ್ವದಂತೆ , ಅದು ವ್ಯರ್ಥವಾಗುವುದಿಲ್ಲ , ಇದು ಅಮ್ಮನ ನಂಬಿಕೆ . ಮುಂದೆ ಎಂದಿಗೂ ನಾನು ದೂರುವುದಿಲ್ಲ,  ನನ್ನ ಹೆತ್ತಮ್ಮನನು, ನನ್ನ ಹೊತ್ತಮ್ಮನನು, ತೀರಿಸಲೇ ಬೇಕಿದೆ ಅವಳ ಋಣ, ಮಗಳಿಗ...

ಮಾರ್ಜಾಲ ಮಾಯೆ

ಬೆಕ್ಕುಗಳೆಂದರೆ ಯಾರಿಗೂ ಅಷ್ಟೇನೂ ಒಲವಿಲ್ಲ. ಅವುಗಳ ಅಂತರಂಗ ಅರಿವಾದರೆ ತಾನೇ! , ಇಷ್ಟವಾಗುವುದು. ಅವೇನೂ ಕೃತಘ್ನ ಪ್ರಾಣಿಗಳಲ್ಲ.. ಅನ್ನ ಕೊಡುವ ಕೈಯನ್ನು   ಅದು ಮರೆಯುವುದಿಲ್ಲ. ಮುಖ ನೋಡಿ ಗುರುತಿಸಿ ಮಿಯಾಂ ಎಂದು ಕೂಗಿ, ಹಿಂಬಾಲಿಸಿ, ಬಾಯಿ ಅಗಲಿಸಿ ನಮ್ಮನ್ನು ಖುಷಿ ಪಡಿಸುವ ಅವುಗಳ ಮೂಕ ಪ್ರೇಮ ಮನ ತಣಿಸುತ್ತದೆ.. ಸಮಯವಾಗಿದೆ ಎಂದು, ಕೂಗಿ ನಿದ್ದೆಯಿಂದ ಎಬ್ಬಿಸಿ, ನಮ್ಮ ಹಿಂದೆ ಬಂದು ಹಾಲು ಕೊಡು ಎಂದು ಪಾತ್ರೆಯತ್ತ ನೋಡುತ್ತವೆ. ನಿಜ ತಾನೆ.. ನಾವು ಎಷ್ಟು ಹೊತ್ತಿಗೆ ಎದ್ದೇಳುತ್ತೇವೆ?, ಏನೇನು ಮಾಡುತ್ತೇವೆ ಪ್ರತಿಯೊಂದನ್ನೂ ಅವು ನೆನಪಿಟ್ಟುಕೊಳ್ಳುತ್ತವೆ. ಅದಕ್ಕೆ ಸರಿಯಾಗಿ ಹೊಂದಿಕೊಂಡು ನಡೆದುಕೊಳ್ಳುತ್ತವೆ.  ಊಟದ ತಟ್ಟೆಯ ಮುಂದೆ ಮೌನವಾಗಿ ಕುಳಿತು ನಮ್ಮ ಮುಖ ನೋಡಿದರೆ , ಹಸಿವಾಗುತ್ತಿದೆ, ಅನ್ನ ಹಾಕಿ ಎಂದು ಅರ್ಥ. ನೀರಿನ ಪಾತ್ರೆಯ ಹತ್ತಿರ ಕೂತು ಮಿಯಾವ್ ಎಂದರೆ ನೀರು ಬೇಕು ಎಂದರ್ಥ. ಯಾವ ಸಮಯದಲ್ಲಿ ಯಾರು ಯಾವ ತಿಂಡಿ ಕೊಡುತ್ತಾರೋ ಅವರ ಬಳಿ ಹೋಗಿ ಅದೇ ತಿಂಡಿಗಾಗಿ ಕೂಗುತ್ತವೆ ಇಲ್ಲ ಹಿಂಬಾಲಿಸುತ್ತವೆ. ಸಸ್ಯಾಹಾರಿಗಳ ಮನೆಯಲ್ಲಿ ಹಾಲು ಮೊಸರು ತಿಂದು ನೆಮ್ಮದಿಯಾಗಿ ಇರುವ ಅವು ಮಾಂಸಾಹಾರಿಗಳ ಮನೆಯಲ್ಲಿ ಮೀನಿನ ಪುಚ್ಚೆ ಎಂದು ಕರೆಸಿಕೊಳ್ಳುತ್ತವೆ. ಪರಿಸರಕ್ಕೆ ಹೊಂದಿಕೊಂಡು ಬಾಳುವ ಗುಣ ಅವುಗಳ ರಕ್ತದಲ್ಲೇ ಇದೆ. ಮರಿಗಳನ್ನು ಕೈಯಲ್ಲಿ ಹಿಡಿದು ಅಭ್ಯಾಸ ಮಾಡಿದರೆ ಅವು ನಮ್ಮಲ್ಲಿ ಹೆಚ್ಚು ವಿಶ್ವಾಸದಿಂದ ಇರು...

ಜಾಣ ಕಿವುಡು

ಹೇಳಿದ್ದು ಕೇಳಲು ಒಲವಿಲ್ಲದರಿಗೆ, ಕೇಳಿದರೂ ಉತ್ತರಿಸಲು ಇಚ್ಚೆಯಿಲ್ಲದರಿಗೆ, ಹೇಳಲು ಉತ್ತರವೇ ಇಲ್ಲದವರಿಗೆ, ಕೇಳಿ ಕೇಳಿ ಸುಸ್ತಾದವರಿಗೆ, ಕೇಳಿದ್ದನ್ನು ಈಡೇರಿಸಲಾಗದವರಿಗೆ, ಸತ್ಯ ಹೇಳಲಾಗದರಿಗೆ, ತಲೆಯಲ್ಲಿ ಯೋಚನೆ ತುಂಬಿದವರಿಗೆ, ಬಹುದೊಡ್ಡ ವರದಾನ, ಈ ಜಾಣ ಕಿವುಡು. ಮತ್ತೆ ಮತ್ತೆ ಹೇಳಲು ಸಮಯವಿಲ್ಲದವರಿಗೆ, ಹೇಳಿದ್ದೇ ಹೇಳುವ ತಾಳ್ಮೆಯಿಲ್ಲದರಿಗೆ, ಸ್ವಾಭಿಮಾನಿಯಾದ ಗುಣವುಳ್ಳರಿಗೆ, ಕಾಯಲಾಗದ ಅಸಹಾಯರಿಗೆ, ಅರ್ಥಮಾಡಿಸುವ ಒಲವಿಲ್ಲದವರಿಗೆ, ಬಲು ದೊಡ್ಡ ಶಾಪ ಈ ಜಾಣ ಕಿವುಡು. ಅದೇನು ಹುಟ್ಟಿನಿಂದ ಬಂದಿದೆಯೋ, ಅದನ್ನು ಅವರೆಲ್ಲಿ ಕಲಿತರೋ ? ಕಿವಿಗೆ ಏನು ಹೊಕ್ಕಿದೆಯೋ, ಇವರದು ದಪ್ಪ ಚರ್ಮವೋ, ಕಿವಿ ಕೇಳುವುದೇ ಇಲ್ಲವೋ, ಈ ಕಲ್ಲು ಬಂಡೆಯ ಹತ್ತಿರ, ಮಾತಾಡಿ ಏನು ಫಲ, ಎಂದು ಬಯ್ಯದೆ ಇರುವರೆ ಯಾರಾದರೂ? ಮಾಡಲು ಕೆಲಸವಿಲ್ಲ, ಅರಿಯಲು ಬುದ್ಧಿಯಿಲ್ಲ ಎಷ್ಟು ವಟಗುಟ್ಟುತ್ತಾರೆ ಇವರು, ತಲೆ ಕೆಟ್ಟು ಹೋಗಿದೆ ಇವರ ಮಾತು ಕೇಳಿ, ಇರಲಿ, ಇವರಿಗೆ ಕಲಿಸಬೇಕು ಎಂದು, ಮೌನವ್ರತ ಮಾಡುವವರು,  ಬಯ್ಯಬಹುದು ಒಳಗಿನಿಂದ, ಮತ್ತೆ ಒಳಗೊಳಗೇ ನಗುತ್ತಿರಬಹುದು, ತಮ್ಮ ಜಾಣ ಕಿವುಡಿಗೆ. ಅವರಿಗೆ ಅವರು ಸರಿ, ಇವರಿಗೆ ಇವರು ಸರಿ, ಹೇಳುವುದು ಯಾರು? ಯಾವುದು ಸರಿ? ಅವರಿವರ, ಇವರವರ, ಅರಿತು ಬಾಳಿದರೆ ಆಗುವುದು ಎಲ್ಲ ಸರಾಸರಿ. ಆಗುವುದು ಎಲ್ಲ ಸರಾಸರಿ...