ಭಾನುವಾರ, ಡಿಸೆಂಬರ್ 1, 2024

ದಾನಶೂರ

ಸೂರ್ಯಪುತ್ರನಾಗಿ ಜನಿಸಿ,
ಸೂತಪುತ್ರನೆಂದು ಕರೆಸಿಕೊಂಡ,
ಕ್ಷತ್ರಿಯಕುಲದಲ್ಲಿ ಜನಿಸಿ,
ಹೀನಕುಲದವನೆಂದೆನಿಸಿಕೊಂಡ,
ಹೆತ್ತವರಿದ್ದರೂ ಅನಾಥನಾದ,
ಹಿರಿಯ ಮಗನಾಗಿ ವಂಶದ ರಾಜನಾಗಿ,
ಮೆರೆಯಬೇಕಾದವ, ಗೌರವಿಸಬೇಕಾದವ,
ಶತೃವಾದ, ಪರಮಶತೃವಾದ.
ತಾನು ಮಾಡದ ತಪ್ಪಿಗೆ, ಹುಟ್ಟಿನಿಂದಲೇ ಬಲಿಯಾದ ಕರ್ಣ, ಒಬ್ಬ ನತದೃಷ್ಟ.

ವಿದ್ಯೆ ಕಲಿಯುವ ಕನಸಿಗೆ ,
ಅಡ್ಡಿಯಾಯಿತು ಅವನ ಕುಲ,
ಸುಳ್ಳು ಹೇಳಿದ ಅವನಿಗೆ,
ದೊರೆಯಲಿಲ್ಲ ವಿದ್ಯೆಯ ಬಲ,
ದೊರೆತದ್ದು ಶಾಪದ ಫಲ,
ಆದರೂ ಅವ ಬಿಡಲಿಲ್ಲ ಛಲ.

ಆಸರೆಯಾದ ಕೌರವೇಂದ್ರ,
ಅವನ ಮೇಲಿನ ಪ್ರೀತಿಗೋ,
ಅಥವಾ ಕರುಣೆಗೋ,
ಅವನ ಸಾಮರ್ಥ್ಯ ನೋಡಿಯೋ, 
ಅರ್ಜುನನ ಪ್ರತಿಸ್ಪರ್ದಿಯಾಗಿಸಲೋ,
ಎಂದು ಕರ್ಣ ಕೇಳಲಿಲ್ಲ,
ಬದಲು ಋಣಿಯಾದ,
ಬದುಕು ಕೊಟ್ಟ ಗೆಳೆಯನಿಗೆ.

ಕೈಹಿಡದ ನಂಬಿಕೆಯ ಮುರಿಯಲಿಲ್ಲ,
ಕೊಟ್ಟ ಮಾತನು ತಪ್ಪಲಿಲ್ಲ,
ಅನ್ನದಾ ಋಣ ಮರೆಯಲಿಲ್ಲ,
ಒಡಹುಟ್ಟುಗಳ ಕೊಲ್ಲಲಿಲ್ಲ ,
ದಾನವನ್ನು ತೊರೆಯಲಿಲ್ಲ,
ತನಗಾಗಿ ಏನನು ಬಯಸಲಿಲ್ಲ,

ಭೂಮಿಯನ್ನು ಕೊಟ್ಟುಬಿಟ್ಟ,
ಹುಟ್ಟುಕವಚವ ತೆಗೆದು ಕೊಟ್ಟ,
ಕರ್ಣಕುಂಡಲ ಕೊಟ್ಟು ಕೆಟ್ಟ,  
ತೊರೆದ ಮಾತೆಗೆ ,ಮಾತು ಕೊಟ್ಟ,
ತೊಟ್ಟಬಾಣವ ಮರಳಿ ತೊಡದ,
ಪಣವ ತೊಟ್ಟ, 
ಅರಿತು ಅರಿತು ಮರೆತೆ ಬಿಟ್ಟ,
ತನ್ನ ಒಳಿತನು ಮರೆತು ಬಿಟ್ಟ.

ಸೋತು ಗೆದ್ದ ವೀರನಾದ,
ಮಾತು ತಪ್ಪದ ದೀರನಾದ,
ಹೆಗಲು ನೀಡುವ ಗೆಳೆಯನಾದ,
ಎಲ್ಲ ಕ್ಷಮಿಸುವ ಜ್ಞಾನಿಯಾದ,
ತಿಳಿದೂ ತಿಳಿದೂ ಮೌನಿಯಾದ,
ಅವನು ಮರೆಯದ ಶೂರನಾದ,
ಯಾರೂ ಮರೆಯದ ದಾನಶೂರನಾದ!.








ಕಾಮೆಂಟ್‌ಗಳಿಲ್ಲ:

ಅಮ್ಮನಲ್ಲದೇ ಬೇರಾರು?

ಹೆತ್ತ ತಾಯಿ ದೇವಕಿಗಿಂತ, ಮಿಗಿಲಾಗಿಯೇ ಸಲಹಿದಳು, ಆ ತಾಯಿ ಯಶೋದೆ, ಅಮ್ಮನೆಂಬ ಹೆಸರಿಗೆ ಅವಳು, ಅನ್ವರ್ಥವೆ ಆದವಳು. ಕುಂತಿ ಹೆತ್ತ ಮಗುವನ್ನು, ಜಗಕೆ ಹೆದರಿ ತ್ಯಜಿಸಿದಳು....