ಎಲ್ಲಿಗೆ ಈ ಪಯಣ?

ಎಲ್ಲಿಗೆ ಈ ಪಯಣ?
ಮುಗಿಯದ ಈ ಕದನ,
ಕಾಡಿದೆ ಈ ಕವನ,
ಮರುಗಿದೆ ಕವಿಮನ,

ಅರೆಬಟ್ಟೆ, ಮುರಿದ ಮನೆ,
ಹಸಿದ ಕಂಗಳು,
ಉರಿದಿದೆ ಸಂಸಾರದ ಸಂಸ್ಕಾರ,
ಉಳಿದುದು ಬರಿ ತಿರಸ್ಕಾರ.

ಒಂದೆಡೆ ಮೆರೆಯುವ, ಮೈಮರೆಯುವ,
ಲಾಲಸೆಯ, ಸುಖ ಬಯಸುವ,
ನಿಯಮವಿರದ, ಅಂಕೆ ಮೀರಿದ,
ಸುಂಕವಿಲ್ಲದ ನಡತೆ.

ಇನ್ನೊಂದೆಡೆ ಮರುಗುವ, ಕರಗುವ,
ನೀತಿಗಂಜುವ, ನಿಯಮ ಮೀರದ,
ಚಿಪ್ಪಿನೊಳಗೆ ಅಡಗಿಕೊಳ್ಳುವ, 
ಬಲಿಪಶುವಿನ ಒಡಲ ಉರಿ.

ಅವರಿಗೆ ಬೇಕಾಗಿದೆ ಸುಖ,
ಅವಳಿಗಿಲ್ಲಿ ಮುಗಿಯದ ಶೋಕ,
ನ್ಯಾಯ ದೊರೆವುದೇ ಇಲ್ಲಿ,
ಅವಳ ಕಾಯುವಿಕೆಯಲ್ಲಿ.

ಪರರಿಗೆ ಹೇಳುವ ನೀತಿ
ಅನ್ವಯಿಸದೆ ಅದೆ ರೀತಿ,
ಯಾರು ತಿಳಿವರು ಇದರ ಶ್ರುತಿ
ಅವರಿಗಿಲ್ಲ ಯಾರ ಭೀತಿ.

ಹೀಗೆ ನಡೆದರೆ ಬಾಳುವ ರೀತಿ
ಎಲ್ಲಿಗೆ ಮುಟ್ಟುವುದೊ ಈ ವಿಕೃತಿ,
ಯಾರಿಗೂ ತಿಳಿದಿಲ್ಲ, ಕದ್ದು ಮುಚ್ಚಿ ಹಾಲು ಕುಡಿಯುವ ಬೆಕ್ಕಿನ ಚೆಲ್ಲಾಟ.

ಆಸೆ ಮುಗಿಯುವ ತನಕ
ವಯಸ್ಸು ಮೀರುವ ತನಕ,
ಕಾಲ ಕರೆಯುವ ತನಕ,
ಕಾಯಬೇಕೆನು? ಬಿಡದೆ ತಾನು?

ಹಾಗೊಮ್ಮೆ ಹೀಗೊಮ್ಮೆ,
ಹೊಯ್ದಾಡುತ್ತ ಸಾಗುವ ಮನಸಿಗೆ,
ಕಣ್ಣೀರ ಸಾಂತ್ವಾನ,
ತುಸು ನೆಮ್ಮದಿಯ ನಿದ್ದೆ,

ಮರೆಯದೆ ಕೊಟ್ಟಿರುವ,
ಕರುಣಾಳು ದೇವರಿಗೆ,
ಮರೆತು ಶರಣಾಗುವುದ,
ಮರೆತಿಲ್ಲ ಅವಳು, ತೊರೆದಿಲ್ಲ ಅವಳು...

ಕಾಮೆಂಟ್‌ಗಳಿಲ್ಲ:

CBSC ಯಿಂದ ಸ್ಟೇಟ್ ಬೋರ್ಡ್ ಗೆ

ಈಗೀಗ ಹೆಚ್ಚಾಗಿ ಮಕ್ಕಳು 10ನೇ ತರಗತಿಯವರೆಗೆ CBSC ಬೋರ್ಡಿನಲ್ಲಿ ಕಲಿಯುತ್ತಾರೆ. ಕೆಲವೊಂದು ವಿದ್ಯಾರ್ಥಿಗಳು ಪಿಯುಸಿಯನ್ನು ಅದೇ ಬೋರ್ಡಿನಲ್ಲಿ ಮುಂದುವರೆಸುತ್ತಾರೆ. ಹೆಚ...